Friday, October 9, 2015

ಮಾನವೀಯತೆಯ ಗುರಿ....

50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು.
ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ.
5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು.
4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿಗೆ ಆ ರೂಮಿನಿಂದ ಹೊರಬಂದರು....
ಹೀಗೆ ಸ್ವಾರ್ಥಿಗಳಾಗಿ ನಾವು
ನಮ್ಮ ಸಂತೋಷವನ್ನು ಹುಡುಕುತ್ತಲೆ ಇರುತ್ತೇವೆ ಆದರೆ ನಮ್ಮ ಸಂತೋಷ ಬೇರೆಯವರಲ್ಲಿ ಬೇರೆಯವರ ಸಂತೋಷ ನಮ್ಮಲ್ಲಿ ಇರುತ್ತದೆ, ನಮ್ಮಲ್ಲಿರುವ ಬೇರೆಯವರ ಸಂತೋಷವನ್ನು ಅವರಿಗೆ ಕೊಟ್ಟರೆ ಅವರಲ್ಲಿರುವ ನಮ್ಮ ಸಂತೋಷವು ನಮಗೆ ಸಿಗುತ್ತದೆ.

ಇದೆ ಮಾನವೀಯತೆಯ ಗುರಿ....🎈🎈🎈🌾😊

Monday, October 5, 2015

ರಸ್ತೆ ಮೇಲೆ ಕಲ್ಲಿನ ಹರಳು

ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊ೦ಡು ನಡಯಬಹುದು. ಆದರೆ ಒಳ್ಳೆಯ ಬೂಟಿನೊಳಗೆ ಒ೦ದೇ ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ. ಹೊರಗಿನ ಸವಾಲುಗಳಿಗಿ೦ತಲೂ ನಾವು ಒಳಗಿನ ದುಬ೯ಲತೆಯಿ೦ದಲೇ ಸೋಲುವುದು ಹೆಚ್ಚು.

Thursday, October 1, 2015

ನೀವೆಷ್ಟು ವಿಶಾಲ ಹೃದಯಿಗಳು!

ಶಾಲೆಯಿಂದ ಮನೆಗೆ ಬಂದ ೪ ವರ್ಷದ ಮಗುವೊಂದು ಊಟ ನಿರಾಕರಿಸಿ ತೆಪ್ಪಗೆ ಕುಳಿತುಬಿಟ್ಟಿತ್ತು. ತಾಯಿ, ಅಜ್ಜಿ, ತಾತ ಯಾರ ಜುಲುಮೆಗೂ ಬಗ್ಗಲಿಲ್ಲ. ಮುದ್ದು ಮಾಡಿದರು, ಚಾಕಲೇಟ್-ಐಸ್ಕ್ರೀಮ್ ನ ಆಮಿಷ ಒಡ್ಡಿದರು, ಗದರಿದರು, ಬುದ್ಧಿ ಹೇಳಿದರು-ಏನೇ ಮಾಡಿದರೂ ಒಂದು ತುತ್ತಿಗೂ ಬಾಯಿ ಬಿಡಲಿಲ್ಲ. ರಾತ್ರಿ ಆಫೀಸಿನಿಂದ ಮರಳಿ ಬಂದ ತಂದೆಗೆ ವರದಿ ಹೋಯಿತು. ಗಾಬರಿಗೊಂಡ ತಂದೆ ಎಲ್ಲ ಕೆಲಸವನ್ನೂ ಬಿಟ್ಟು ಮಗನನ್ನು ತೊಡೆಯ ಮೇಲೆತ್ತಿಕೊಂಡು ಊಟ ಮಾಡದಿರುವುದಕ್ಕೆ ಕಾರಣ ಕೇಳಿದ.

"ನಾನು ಕೇಳಿದ್ದನ್ನು ಒಪ್ಪಿಕೊಂಡರೆ ತಿನ್ನುವೆ."-ಎಂದಿತು ಮಗು.

"ಆಯ್ತು, ನಿನಗೇನು ಬೇಕು ಹೇಳು. ಕೈಲಾದಲ್ಲಿ ಕೊಡಿಸುವೆ. ತೀರ ದುಬಾರಿಯದ್ದು ಕೇಳಿದರೆ ಕೊಡಿಸಲಾರೆ." ಎಂದ ಅಪ್ಪ ಪಟ್ಟು ಬಿಡದೆ.

"ದುಬಾರಿಯದ್ದೇನೂ ಕೇಳುತ್ತಿಲ್ಲ ನಾನು. ಒಂದು ಚಿಕ್ಕ ಆಸೆಯಿದೆ ಅಷ್ಟೆ." ತಂದೆ ಒಪ್ಪಿದ.

ಮಗು ಹೇಳಿತು-"ನೀನು ಸೆಲೂನಿಗೆ ಕರೆದುಕೊಂಡು ಹೋಗಿ ನನ್ನ ತಲೆ ಬೋಳಿಸಬೇಕು."

"ಇದೆಂಥ ವಿಲಕ್ಷಣ ಆಸೆ!" ವಿಸ್ಮಿತನಾಗಿ ತಂದೆ ನುಡಿದ. "ಎಷ್ಟು ಅವಲಕ್ಷಣವಾಗಿ ಕಾಣುವೆ ನೀನು ಗೊತ್ತೇ? ಶಾಲೆಯಲ್ಲೂ ಹುಡುಗರು ನಿನ್ನನ್ನು ನೋಡಿ ನಗುವರು."

"ನೀನು ಪ್ರಾಮಿಸ್ ಮಾಡಿದೀಯ"-ಮುಖ ಊದಿಸಿಕೊಂಡಿತು ಮಗು.

ಅಂತೂ ಇಂತೂ ಭರವಸೆಯನ್ನು ಈಡೇರಿಸದಿದ್ದರೆ ಮಗುವಿಗೆ ತಪ್ಪು ಸಂದೇಶ ಕೊಟ್ಟಂತಾಗುವುದೆಂದು ತಂದೆ ಒಪ್ಪಿದ. ಮಗು ಊಟ ಮಾಡಿತು. ತಂದೆ ಮಗುವನ್ನು ಸೆಲೂನಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬಂದ.

ಮರುದಿನ ಬೋಡುತಲೆಯ, ಗುಂಡುಗುಂಡಾಗಿದ್ದ, ಮಗನ ಅರಳು ಕಣ್ಣುಗಳಲ್ಲಿ ಮಿಂಚುತ್ತಿದ್ದ ಸಂತಸವನ್ನು ಕಂಡು ಸಂಭ್ರಾಂತನಾದ. ಶಾಲೆಗೆ ಬಿಡುತ್ತಿದ್ದಂತೆ ಮಗು ಕಾರಿನಿಂದ ಇಳಿದು ತನ್ನಂತೆಯೇ ಬೋಡುತಲೆಯಿದ್ದ ಹೆಣ್ಣುಮಗುವಿನ ಕೈ ಹಿಡಿಯಲು ಓಡಿ ಹೋಯಿತು. ಎರಡು ಮಕ್ಕಳೂ ಜೋರಾಗಿ ಕೇಕೆ ಹಾಕಿ, ನಕ್ಕು ಕೈಹಿಡಿದು ಜೊತೆಯಾಗಿ ಶಾಲೆಯೊಳಕ್ಕೆ ಹೊರಟು ಹೋದವು.ಇನ್ನೊಂದು ಮಗುವಿನ ತಾಯಿ ಈತನಿದ್ದ ಕಡೆಗೆ ಬಂದು-" ಇಂಥ ಮಗುವನ್ನು ಪಡೆದ ನೀವು ಅದೃಷ್ಟಶಾಲಿ" ಎಂದು ಅಭಿನಂದಿಸಿದಳು.

ಅರೆಕ್ಷಣ ವಿಸ್ಮಿತನಾದ ಅವನಿಗೆ "ನನ್ನ ಮಗು ಕ್ಯಾನ್ಸರ್ ಪೀಡಿತೆ. ಕೀಮೋಥೆರಪಿ ಮತ್ತು ರೇಡಿಯೇಶನ್ ನಿಂದಾಗಿ ತಲೆ ಬೋಡಾಗಿದೆ. ಶಾಲೆಗೆ ಬರಲು ಮುಜುಗರ ಪಡುತ್ತಿದ್ದ ಅವಳನ್ನು ಸಂತೈಸಿ ನಿಮ್ಮ ಮಗು "ನಾನೂ ನಿನ್ನಂತೆಯೇ ಆಗುತ್ತೇನೆ, ನಿನಗೆ ಮುಜುಗರವಾಗದು" ಎಂದು ಹೇಳಿ ಕೊಟ್ಟ ಭಾಷೆ ಉಳಿಸಿಕೊಂಡು ಅವಳ ನೆಮ್ಮದಿಗೆ ಕಾರಣನಾಗಿದ್ದಾನೆ. ಇಷ್ಟು ಪುಟ್ಟ ಮಗು ಅವಳ ನೋವನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿದ್ದಾನೆ. ಅವನ ಮಾತನ್ನು ನಡೆಸಿಕೊಟ್ಟ ನೀವೆಷ್ಟು ವಿಶಾಲ ಹೃದಯಿಗಳು!" ಎಂದಳು.

ಹಿಂದಿನ ದಿನವಷ್ಟೇ ತೊಡೆಯ ಮೇಲೆ ಕೂರು ಹಠ ಮಾಡಿದ ಮಗು, ಇದ್ದಕ್ಕಿದ್ದ ಹಾಗೆ ಎಲ್ಲವನ್ನೂ ಮೀರಿಸಿ ಆಕಾಶದೆತ್ತರ ಬೆಳೆದು ನಿಂತಂತೆ ಭಾಸವಾಯಿತು ಅವನಿಗೆ. ಕಣ್ಣುಗಳು ಆರ್ದ್ರವಾದವು.

ಬಾಲ್ಯವೊಂದು ನಂದನ. ಎಳೆಯ ಮನಸ್ಸುಗಳು ತೆಗೆದುಕೊಳ್ಳುವ ನಿರ್ಧಾರಗಳಿಗೂ ವಯಸ್ಸಿಗೂ ಸಂಬಂಧವಿಲ್ಲ. ಅವರು ನೋವಿಗೆ, ಅಸಹಾಯಕತೆಗೆ, ಸ್ನೇಹಕ್ಕೆ, ಪ್ರೀತಿಗೆ, ಭಾವನೆಗಳಿಗೆ ತೆರೆದುಕೊಳ್ಳುವಷ್ಟು ನಾವು ತೆರೆದುಕೊಳ್ಳಲಾರೆವು. ಅವರು ಕ್ಷಣಾರ್ಧದಲ್ಲಿ ಅಚ್ಚರಿ, ಅಗಾಧತೆಗಳನ್ನು ಸೃಷ್ಟಿಸಿಬಿಡಬಲ್ಲರು. ಅವರ ಮಾತುಗಳನ್ನು ಅಪಹಾಸ್ಯಕ್ಕೀಡು ಮಾಡಿಯೋ, ಹಗುರವಾಗಿಯೋ ತೆಗೆದುಕೊಂಡರೆ ಅದಕ್ಕಿಂತ ಹೆಚ್ಚಿನ ದಡ್ಡತನ ಮತ್ತೊಂದಿಲ್ಲ.

ಕೆಲಸದ ಒತ್ತಡಗಳಲ್ಲಿ ಮಕ್ಕಳನ್ನು ಮಾತನಾಡಿಸಲು ಹೊತ್ತಿಲ್ಲವೆಂದು ನಿರಾಕರಿಸುವವರೇ ಬಹಳ ಮಂದಿ. ತುಂಬ ಮಾತನಾಡಬೇಕಾದ ವಯಸ್ಸು ಅದು. ಕಿವಿಯಷ್ಟನ್ನೇ ಅಲ್ಲ, ಮನಸ್ಸು ಕೊಟ್ಟು ಆಲಿಸಬೇಕಾದದ್ದು ಹಿರಿಯರೆಲ್ಲರ ಆದ್ಯ ಕರ್ತವ್ಯ...🙏